ರಾಯಚೂರು 11/07/26: ಕೇವಲ 10 ರೂಪಾಯಿ ವಿಚಾರಕ್ಕೆ ಆರಂಭವಾದ ಜಗಳ ವ್ಯಕ್ತಿಯೊಬ್ಬರ ಹತ್ಯೆಯಲ್ಲಿ ಅಂತ್ಯಗೊಂಡ ಘಟನೆ ಜಿಲ್ಲೆಯ ಹಂಚಿನಾಳ ಕ್ಯಾಂಪ್ ಸಮೀಪದ ಪೆಟ್ರೋಲ್ ಬಂಕ್ನಲ್ಲಿ ಬುಧವಾರ ರಾತ್ರಿ ನಡೆದಿದೆ. ಈ ಸಂಬಂಧ 6 ಮಂದಿ ಆರೋಪಿಗಳನ್ನು ಇಡಪನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೃತರನ್ನು ಮೇಘನಾಥ್ (42) ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ರವಿ, ವೀರೇಶ, ನರಸಿಂಹ, ಮಾರೆಪ್ಪ, ರಮೇಶ ಹಾಗೂ ಪ್ರವೀಣ ಎಂಬವರನ್ನು ಬಂಧಿಸಲಾಗಿದೆ.
ಜುಲೈ 8ರಂದು ರಾತ್ರಿ ಹಂಚಿನಾಳ ಪೆಟ್ರೋಲ್ ಬಂಕ್ನಲ್ಲಿ ಮಹೇಶ ಎಂಬವರು ಪೆಟ್ರೋಲ್ ತೆಗೆದುಕೊಂಡಿದ್ದು, 10 ರೂಪಾಯಿ ಕಡಿಮೆ ಕೊಟ್ಟಿದ್ದಕ್ಕೆ ಬಂಕ್ ಸಿಬ್ಬಂದಿ ರವಿ ಹಾಗೂ ಮಹೇಶ ನಡುವೆ ಜಗಳ ಆರಂಭವಾಗಿದೆ. ಆಗ ಜೊತೆಗಿದ್ದ ನಾಗರಾಜ್ ಹಾಗೂ ಕೊಲೆಗೀಡಾದ ಮೇಘನಾಥ್ ಜಗಳ ಬಿಡಿಸಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಆರೋಪಿಗಳು ಮೇಘನಾಥ್ ಮೇಲೆ ಗಂಭೀರ ಹಲ್ಲೆ ನಡೆಸಿದ್ದು, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಬಂಕ್ನಲ್ಲಿ ಮಹೇಶ ಪೆಟ್ರೋಲ್ ತೆಗೆದುಕೊಂಡಿದ್ದು, ಆತ 10 ರೂಪಾಯಿ ಕಡಿಮೆ ಕೊಟ್ಟಿದ್ದಕ್ಕೆ ಬಂಕ್ನ ಸಿಬ್ಬಂದಿ ರವಿ ಹಾಗೂ ಮಹೇಶ ನಡುವೆ ಜಗಳವಾಗಿದೆ. ಜೊತೆಗಿದ್ದ ನಾಗರಾಜ್ ಹಾಗೂ ಮೇಘನಾಥ ಜಗಳ ಬಿಡಿಸಲು ಮುಂದಾಗಿದ್ದಾರೆ. ಆಗ ಬಂಕ್ನಲ್ಲಿದ್ದ ಆರೋಪಿಗಳು ನೀನ್ಯಾಕೆ ನಮ್ಮ ಜಗಳದಲ್ಲಿ ಅಡ್ಡ ಬರುತ್ತೀಯಾ? ನಿಂದು ಬಹಳ ಆಗಿದೆ, ನಿನ್ನನ್ನು ಇಂದು ಸುಮ್ಮನೆ ಬಿಡುವುದಿಲ್ಲ ಅಂತಾ ನರಸಿಂಹ ಮತ್ತು ಮಾರೆಪ್ಪ ಅವರು ಮೇಘನಾಥ್ಗೆ ಅವಾಚ್ಯ ಶಬ್ದಗಳಿಂದ ಜಾತಿ ನಿಂದಿಸಿದ್ದಾರೆ. ಆಗ ವೀರೇಶ್ ಎಂಬಾತ ಮೇಘನಾಥ್ಗೆ ಕಟ್ಟಿಗೆಯಿಂದ ತಲೆಗೆ ಹೊಡೆದಿದ್ದಾರೆ. ಇದೇ ವೇಳೆ ರವಿ ಕೂಡ ಕಟ್ಟಿಗೆ ತೆಗೆದುಕೊಂಡು ಮೇಘನಾಥ್ನ ತಲೆಗೆ ಬಾರಿಸಿದರೆ, ನರಸಿಂಹ ಸಹ ಕಟ್ಟಿಗೆಯಿಂದ ಮೇಘನಾಥ್ನ ಬೆನ್ನಿಗೆ ಜೋರಾಗಿ ಹೊಡೆದಿದ್ದು, ಆತ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದಾನೆ. ಈ ವೇಳೆ ಜಗಳ ಬಿಡಿಸಲು ಹೋದ ಮಹೇಶ ಮತ್ತು ನಾಗರಾಜನಿಗೂ ಆರೋಪಿತರು ಹಲ್ಲೆ ಮಾಡಿದ್ದಾರೆ ಎಂದು ಮೇಘನಾಥ್ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.
ತೀವ್ರ ಗಾಯಗೊಂಡ ಮೇಘನಾಥ್ನನ್ನು ರಾಯಚೂರಿನ ಬಾಲಂಕು ಆಸ್ಪತ್ರೆಗೆ ದಾಖಲಿಸಿ ಗುರುವಾರ ಮುಂಜಾನೆ ತಲೆಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆದರೆ ಬೆಳಗ್ಗೆ 8.25ರ ಸುಮಾರಿಗೆ ಆತ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.ಘಟನೆಯ ದೃಶ್ಯಗಳು ಪೆಟ್ರೋಲ್ ಬಂಕ್ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಇಡಪನೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ವಿರುದ್ಧ ವಿವಿಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ಗಳಡಿ ಪ್ರಕರಣ ದಾಖಲಾಗಿದೆ.
