ಕೊಕ್ಕಡ : ಸಂತ ಜೋನರ ದೇವಾಲಯ ಕೌಕ್ರಡಿ ಕೊಕ್ಕಡದಲ್ಲಿ ಮೊಂತಿ ಹಬ್ಬ ಆಚರಣೆ

|

ಕೊಕ್ಕಡ:ಸಂತ ಜೋನರ ದೇವಾಲಯ ಕೌಕ್ರಾಡಿ ಕೊಕ್ಕಡ ದಲ್ಲಿ ಮಾತೆ ಮರಿಯಮ್ಮರವರ ಜನುಮ ದಿನ ಆಚರಣೆ ಮತ್ತು ತೆನೆ ಹಬ್ಬ ವಿಜೃಂಭಣೆಯಿಂದ ನಡೆಯಿತು. ತೆನೆಗಳನ್ನು ಆಶೀರ್ವದಿಸುವ ಕಾರ್ಯವನ್ನು ವಂ.ಫಾ. ಅಶೋಕ್ ಡಿಸೋಜರವರು ನಡೆಸಿಕೊಟ್ಟರು. ಭಕ್ತಾದಿಗಳು ಮಾತೆ ಮರಿಯಮ್ಮರಿಗೆ ಪ್ರಷ್ಪಾರ್ಪಣೆ ಮಾಡಿದರು. ನಂತರ ಸಂಭ್ರಮದ ಮೆರವಣಿಗೆಯೊಂದಿಗೆ ದೇವಾಲಯಕ್ಕೆ ಆಗಮಿಸಿದ ಭಕ್ತರು ಬಲಿಪೂಜೆಯಲ್ಲಿ ಭಾಗವಹಿಸಿದರು. ಬಲಿಪೂಜೆಯ ಮುಂದಾಳುತ್ವ ಫಾ. ಅನಿಲ್ ಪ್ರಕಾಶ್ ಡಿಸಿಲ್ವಾರವರು ವಹಿಸಿ, ವಂ.ಫಾ. ಅಶೋಕ್ ಡಿಸೋಜ ಎಸ್.ವಿ.ಡಿ ಪ್ರವಚನ ನೀಡಿದರು. ಈ ಹಿಂದೆ ನಡೆದ ನವದಿನದ ನೊವೇನಾದಲ್ಲಿ ಹೂಗಳನ್ನು ಅರ್ಪಿಸಿದ ಮಕ್ಕಳನ್ನು ಹಾಗೂ ಹಿರಿಯರನ್ನು, ಎಲ್ಲಾ ದಾನಿಗಳನ್ನು, ಸಿಹಿ ತಿಂಡಿ ಮತ್ತು ಕಬ್ಬು ನೀಡಿದ ದಾನಿಗಳನ್ನು ಚರ್ಚ್ ನ ಧರ್ಮಗುರು ಫಾ. ಅನಿಲ್ ಪ್ರಕಾಶ್ ಡಿಸಿಲ್ವಾರವರು ಈ ಸಂದರ್ಭದಲ್ಲಿ ಸ್ಮರಿಸಿ ಅಭಿನಂದನೆ ಸಲ್ಲಿಸಿದರು. ಬಲಿಪೂಜೆಯ ನಂತರ ದೇವಾಲಯದ ಪಾಲನಾ ಪರಿಷತ್ ಸದಸ್ಯರಿಗೆ ಗೌರವ ಪೂರ್ವಕವಾಗಿ ಧರ್ಮಗುರುಗಳು ತೆನೆಗಳನ್ನು ವಿತರಿಸಿದರು. ಭಕ್ತಾದಿಗಳಿಗೆ ಆರು ವಾಳ್ಯಗಳ ಗುರಿಕಾರರು ತೆನೆಯನ್ನು ಹಂಚಿದರು. ದೇವಾಲಯದ ಆವರಣದಲ್ಲಿ ಕಥೋಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ)ಸದಸ್ಯರು ಹಾಗೂ ಸಾಮಾಜಿಕ ಸಂವಹನ ಆಯೋಗ ಮುಂಚಿತವಾಗಿ ಅಂತರ್ಜಾಲತಾಣದಲ್ಲಿ ನಡೆಸಿದ ಗಾಯನ ಸ್ಪರ್ಧೆ ಹಾಗೂ ಬಲಿಪೀಠ ಸೇವಕರಿಗೆ ಆಯೋಜಿಸಿದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮತ್ತು ಭಾಗವಹಿಸಿದವರಿಗೆ ಬಹುಮಾನ ವಿತರಿಸಲಾಯಿತು. I.C.Y.M ಸದಸ್ಯರು ಎಲ್ಲರಿಗೂ ಕಬ್ಬು ವಿತರಿಸಿದರು.