ಗುರುವಾರ ಪಾಣೆಮಂಗಳೂರಿನ ನೇತ್ರಾವತಿ ನದಿಯಲ್ಲಿ ಯುವಕನೊಬ್ಬನ ಮೃತದೇಹ ಪತ್ತೆ

|

ಬಂಟ್ವಾಳ: ಮೇ ೨೨: ಗುರುವಾರ ಪಾಣೆಮಂಗಳೂರಿನ ನೇತ್ರಾವತಿ ನದಿಯಲ್ಲಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿದೆ.ಮೃತನನ್ನು ಬಿ.ಮೂಡ ಗ್ರಾಮದ ಗೂಡಿನಬಳಿ ನಿವಾಸಿ, ಮೊಹಮ್ಮದ್ ಅವರ ಪುತ್ರ ಇರ್ಫಾನ್ (೩೬) ಎಂದು ಗುರುತಿಸಲಾಗಿದೆ.ಈ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದ ಬಂಟ್ವಾಳ ನಗರ ಪುರಸಭೆಯ ಪೌರಕಾರ್ಮಿಕರು ನದಿಯಲ್ಲಿ ತೇಲುತ್ತಿದ್ದ ಶವವನ್ನು ಗಮನಿಸಿ ತಕ್ಷಣವೇ ಬಂಟ್ವಾಳ ನಗರ ಪೊಲೀಸರಿಗೆ ಮಾಹಿತಿ ನೀಡಿದರು.ಬಂಟ್ವಾಳ ಪೊಲೀಸರು ಹಾಗೂ ಗೂಡಿನ‌ಬಳಿಯ ಸ್ಥಳೀಯರು ಮೃತದೇಹವನ್ನು ನದಿಯಿಂದ ಮೇಲಕ್ಕೆತ್ತಿದರು. ಆರಂಭದಲ್ಲಿ ಮೃತನ ಗುರುತು ಪತ್ತೆ ಹಚ್ಚಲು ಸಾಧ್ಯವಾಗದ ಕಾರಣ, ಮೃತದೇಹವನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಯ ಶವಾಗಾರದ ಶೀತಲೀಕರಣದಲ್ಲಿ ಇರಿಸಲಾಗಿತ್ತು.ನಂತರ ಸಂಜೆ ವೇಳೆಗೆ ಮೃತನನ್ನು ಗೂಡಿನಬಳಿ ನಿವಾಸಿ ಇರ್ಫಾನ್ ಎಂದು ಗುರುತಿಸಲಾಯಿತು. ಇರ್ಫಾನ್ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಸುಮಾರು ಮೂರು ವರ್ಷಗಳ ಹಿಂದೆ ಊರಿಗೆ ಮರಳಿದ್ದರು. ಊರಿಗೆ ಬಂದ ನಂತರ ಅವರು ಆಟೋ ರಿಕ್ಷಾ ಖರೀದಿಸಿ, ಅದನ್ನು ಚಾಲನೆ ಮಾಡುವ ಮೂಲಕ ಜೀವನ ನಡೆಸುತ್ತಿದ್ದರು.ಇರ್ಫಾನ್ ವಿವಾಹಿತರಾಗಿದ್ದು, ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ. ಇವರು ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ.ಮೃತನ ಕೈಗಳಲ್ಲಿ ಗಾಯಗಳಿರುವುದು ಪತ್ತೆಯಾಗಿರುವುದರಿಂದ, ಕುಟುಂಬಸ್ಥರು ಈ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅವರು ಮರಣೋತ್ತರ ಪರೀಕ್ಷೆ ನಡೆಸುವಂತೆ ಒತ್ತಾಯಿಸಿದ್ದು, ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಬೇಕೆಂದು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.