
ನೆಲ್ಯಾಡಿ :ನೆಲ್ಯಾಡಿ ಬಾಲಯೇಸು ದೇವಾಲಯದಲ್ಲಿ ಶ್ರದ್ಧಾ ಭಕ್ತಿಯ ಗರಿಗಳ ಭಾನುವಾರ ಆಚರಣೆಯೇಸು ಕ್ರಿಸ್ತರು ಜೆರುಸಲೇಮ್ ನಗರವನ್ನು ಪ್ರವೇಶಿಸಿದ ಸವಿನೆನಪಿಗಾಗಿ ಆಚರಿಸಲಾಗುವ ‘ಗರಿಗಳ ಭಾನುವಾರ’ವನ್ನು (Palm Sunday) ಇಂದು ಆಚರಿಸಲಾಯಿತು.ಪ್ರಾರಂಭದಲ್ಲಿ ಗರಿಗಳನ್ನು ಆಶಿರ್ವಾದಿಸಲಾಯಿತು ನಂತರ ಬಲಿಪೂಜೆಯನ್ನು ದೇವಾಲಯದ ಧರ್ಮಗುರುಗಳಾದ ವಂದನೀಯ ಫಾದರ್ ಗ್ರೇಶನ್ ಆಲ್ವಾರೀಸ್ ನೆರವೇರಿಸಿದರು.ಬಲಿಪೂಜೆಯ ವೇಳೆ ಯೇಸುವಿನ ಪಾಡುಗಳ (Passion of Christ) ಇತಿಹಾಸವನ್ನು ವಾಚಿಸುವ ಮೂಲಕ ತಪಸ್ಸು ಕಾಲದ ಅಂತಿಮ ಘಟ್ಟಕ್ಕೆ ಹಾಗೂ ಮುಂಬರುವ ಈಸ್ಟರ್ ಹಬ್ಬಕ್ಕೆ ವಿಶ್ವಾಸಿಗಳನ್ನು ಸಜ್ಜುಗೊಳಿಸಲಾಯಿತು.
ಈ ದಿನದ ವಿಶೇಷತೆ :ಇಂದು ಕ್ರೈಸ್ತರು ಗರಿಗಳ ಭಾನುವಾರವನ್ನು ಆಚರಿಸುತ್ತಾರೆ. ಗರಿಗಳ ಭಾನುವಾರವನ್ನು ಈಸ್ಟರ್ ಹಬ್ಬದ ಒಂದು ವಾರ ಮುಂಚಿತವಾಗಿ ಆಚರಿಸಲಾಗುತ್ತದೆ. ವಿಭೂತಿ ಬುಧವಾರದಿಂದ ಆರಂಭವಾಗಿ ಈಸ್ಟರ್ ಹಬ್ಬದ ಮುಂಚಿನ ದಿನ, ಅಂದರೆ ಸುಮಾರು ನಲ್ವತ್ತು ದಿನಗಳನ್ನು ಕ್ರೈಸ್ತರು ತಪಸ್ಸು ಕಾಲವೆಂದು ಪಾಲಿಸುತ್ತಾರೆ. ಈ ಕಾಲದಲ್ಲಿ ಯೇಸು ಕ್ರಿಸ್ತರ ಯಾತನೆ, ಮರಣ ಮತ್ತು ಪುನರುತ್ಥಾನವನ್ನು ಧ್ಯಾನಿಸುತ್ತಾ ತಮ್ಮ ಜೀವನದಲ್ಲಿ ಬದಲಾವಣೆ ತರಲು ಪ್ರಯತ್ನಿಸುತ್ತಾರೆ. ಈ ತಪಸ್ಸು ಕಾಲದಲ್ಲಿ ಬರುವ ಒಂದು ಆಚರಣೆ ಗರಿಗಳ ಭಾನುವಾರ. ಈ ಆಚರಣೆಯ ಮೂಲವಿರುವುದು ಯೇಸು ಅಂತಿಮ ಶಿಲುಬೆ ಹಾದಿಗಾಗಿಯೆಂದೇ ಜೆರುಸಲೇಮ್ ನಗರಕ್ಕೆ ಪ್ರವೇಶ ಮಾಡುವ ವೃತ್ತಾಂತದಲ್ಲಿ. ಜೆರುಸಲೇಮಿಗೆ ಪ್ರವೇಶಿಸಬೇಕಾದರೆ ಜನರೆಲ್ಲ ಅವರನ್ನು ಕೊಂಡಾಡಿದರು. ಆಲಿವ್ ಮರದ ರೆಂಬೆ ಕೊಂಬೆಗಳನ್ನು ಕಿತ್ತು ತಂದು, ಹಾದಿಯುದ್ದಕ್ಕೂ ವಸ್ತ್ರಗಳನ್ನು ಹಾಸುತ್ತಾ ಹೊಸಾನ್ನ ಎಂದು ಜಯಕಾರ ಹಾಕಿದರು. ಆದರೆ ಇದೇ ಜನ ಗುಡ್ ಫ್ರೈಡೇ ದಿನ ಆತನನ್ನು ಶಿಲುಬೆಗೇರಿಸಿ ಎಂದು ಕೂಗಿದರು. ಯೇಸು ಜೆರುಸಲೇಮಿಗೆ ಪ್ರವೇಶ ಮಾಡಿದ ದಿನದಂದು ಜನರು ಜಯಕಾರ ಹಾಕಿದ ಸ್ಮರಣೆಗಾಗಿ ಜಗತ್ತಿನಾದ್ಯಂತ ಕ್ರೈಸ್ತರು ಗರಿಗಳ ಭಾನುವಾರವನ್ನು ಆಚರಿಸುತ್ತಾರೆ. ಇಲ್ಲಿ ಮಹತ್ವವಿರುವುದು ಯೇಸುವನ್ನು ಜನ ಕೊಂಡಾಡಿದರು ಎಂಬುದರಲ್ಲಿ ಅಲ್ಲ. ಅದು ಕ್ಷಣಿಕ ಎಂಬುದು ಯೇಸುವಿಗೆ ಮೊದಲೇ ತಿಳಿದಿತ್ತು. ಆದರೆ ಯೇಸು, ತನಗೆ ಒದಗಿ ಬರುವ ಮರಣ ಯಾವ ರೀತಿಯದ್ದೆಂದು ತಿಳಿದು ಕೂಡ ಅದರಿಂದ ತಪ್ಪಿಸಲು ಪ್ರಯತ್ನಿಸದೆ, ದಿಟ್ಟತನದಿಂದ ಎದುರಿಸಲು ಸನ್ನದ್ಧರಾಗಿ ವೈಭವೋಪಾದಿಯಲ್ಲಿ ಜೆರುಸಲೇಮಿಗೆ ಪ್ರವೇಶ ಮಾಡುತ್ತಾರೆ. ಇದಕ್ಕಿಂತ ಮಿಗಿಲಾಗಿ, ತನ್ನ ಚಿತ್ತವಲ್ಲ, ತನ್ನ ತಂದೆ ದೇವರ ಚಿತ್ತವನ್ನು ನೆರವೇರಿಸಲು ತಾನು ಸಿದ್ಧನಾಗಿದ್ದೇನೆ ಎಂದು ಅವರು ಸಾರಿ ಹೇಳುವಂತಿದೆ. ಈ ಅರ್ಥದಲ್ಲಿ, ಗರಿಗಳ ಭಾನುವಾರ ಪ್ರತಿ ಭಕ್ತನಿಗೆ ದೇವರ ಚಿತ್ತಕ್ಕೆ ಶರಣಾಗುವ ಮಹತ್ವದ ಸಂದೇಶವನ್ನು ನೀಡುತ್ತದೆ.
